ಸಖ್ಯಮೇಧನ ದೆವ್ವ..!!

ಆಗೆಲ್ಲಾ ನಿವೇದ್ ನಂಗೆ ತುಂಬಾ ಕ್ಲೋಸ್ ಆಗಿದ್ದ. ಪ್ರತೀದಿನ ಹೈಸ್ಕೂಲಿಂದ ಐದು ಗಂಟೆಗೆ ನಾನು ಬಂದರೆ ನಿವೇದ್ ಅವನ ಶಾಲೆಯಿಂದ ಬರಲಿಕ್ಕೆ ಆರೂವರೆ ಆಗ್ತಿತ್ತು. ಯಾಕಂದ್ರೆ ಅವನು ಹೋಗ್ತಿದ್ದಿದ್ದು ಶಿರಸಿ ಚಂದನ ಶಾಲೆಗೆ. ಅಲ್ಲಿಂದ ಸ್ಕೂಲ್ ಬಸ್ ಬಂದು ನಮ್ಮೂರು ತಲುಪೋದು ಸ್ವಲ್ಪ ತಡಾನೇ. ಬಹಳಷ್ಟು ಬಾರಿ ಅವನನ್ನ ಪೇಟೆಯಿಂದ ಮನೆವರೆಗೆ ಕರೆದುಕೊಂಡು ಬರಲಿಕ್ಕೆ ನಾನೇ ಹೋಗ್ತಿದ್ದೆ.

ಕರಡಿಗೆಮನೆಯಲ್ಲಿ ನಂಗೆ ತುಂಬಾ ಫ್ರೀಡಮ್ ಸಿಗ್ತಿತ್ತು. ಜೊತೆಗೆ ಮಕ್ಕಳಿದ್ದರು. ಪ್ರತಿದಿನ ಬರೀ ಮಸ್ತಿ, ಮಜಾ ಜೋಕ್ಸ್, ಬೇರೆ ಬೇರೆ ಎಕ್ಸ್ಪೆರಿಮೆಂಟುಗಳು.. ನಾನು ದಿನದ ಪ್ರತೀ ನಿಮಿಷವನ್ನ ಆಸ್ವಾದಿಸಿದ್ದು ಆಗ ಮಾತ್ರ…

ಅದಾಗಲೇ ನಾನು ನನ್ನ “ಸಖ್ಯಮೇಧ” ಅನ್ನೋ ಹೆಸರಿನ ‘brand building’ ಚೆನ್ನಾಗಿ ಮಾಡಿದ್ದೆ( ಮಕ್ಕಳ ವಲಯದಲ್ಲಿ ????????) . ಬಹಳಷ್ಟು ಬಾರಿ ನಿವೇದ್, ಸೋನು ಮುಂತಾದವರು ಬೇಕಂತ ಸಖ್ಯಮೇಧ ಅಂತ ಕರೆದರೆ ಒಳಗೊಳಗೇ ಖುಷಿ ಆಗ್ತಿದ್ದದ್ದು ಹೌದು. ನಂಗೆ ಅದು ಒಂಥರಾ virtual identity ಆಗಬೇಕು ಅನ್ನೋ ಆಸೆ ಇತ್ತು..

ಅವತ್ತೊಂದಿನ ನಾನು, ನಿವೇದ್ ಮತ್ತು ರೋಹಿತ್ (ನಿವೇದ್ ನ ಕಸಿನ್) ಗದ್ದೆಗೆ ಹೊರಟಿದ್ವಿ. ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಇರೋದು ಗದ್ದೆ. ಪಕ್ಕದಲ್ಲಿ ಬಯಲು ತೋಟ ಮಧ್ಯೆ ಗದ್ದೆ ಇತ್ತು. ಸಂಜೆ ಹೊತ್ತಿಗೆ ಸಾವಿರಾರು ಹಕ್ಕಿಗಳು ಗುಂಪು ಕಟ್ಟಿಕೊಂಡು ಅಲ್ಲಿ ಬರ್ತಿದ್ವು. ಜೊತೆಗೆ ಆ ಜಾಗ ಕೂಡಾ ತುಂಬಾ addictive. ಅದಕ್ಕೇ ನಾನು ಓದೋಕೆ ಅಂತ ಹೇಳಿ ಪುಸ್ತಕ ಹಿಡಿದುಕೊಂಡು ಬಹಳಷ್ಟು ಬಾರಿ ಅಲ್ಲಿ ಬಂದು ಮರದ ಮೇಲೆ ಕೂತು ಇದನ್ನೆಲ್ಲಾ ನೋಡ್ತಾ ಯೋಚನೆ ಮಾಡ್ತಾ ಕೂತಿರ್ತಿದ್ದೆ. ಜೊತೆಗೆ, ಡಾಂಬರು ರಸ್ತೆಯ ಒಂದು ಬದಿಗೆ ಗದ್ದೆ, ತೋಟ ಎಲ್ಲಾ ಇದ್ದರೆ ಇನ್ನೊಂದು ಬದಿಗೆ ಅಶೋಕವನ ಇದೆ. ಇದು ಯಲ್ಲಾಪುರ ತಾಲ್ಲೂಕಿನ ವಿಶೇಷಗಳಲ್ಲೊಂದು. ಶಿವರಾತ್ರಿಯ ಸಮಯಕ್ಕೆ ಆ ಕಪ್ಪುಗಾಡಿನಲ್ಲಿ ಇರೋ ಸಾವಿರಾರು ಅಶೋಕ ಮರಗಳು ಹೂಬಿಟ್ಟು ಸ್ವರ್ಗ ಸೃಷ್ಟಿಸಿರುತ್ತವೆ. ಅದೊಂಥರ ಭಯಂಕರ ಬೆಟ್ಟ. ಒಂದು ರೀತಿ ಭಯ ಹುಟ್ಟಿಸೋ ಕಾಡು, ಅಲ್ಲಿ ಹೋದ ತಕ್ಷಣ ಕವ್ವನೆ ಕವಿಯೋ ಒಂಟಿತನ.. ಲವಂಗ ಮತ್ತೆ ಅಶೋಕ ಮರಗಳ ಒಂಥರಾ ವಿಚಿತ್ರ ಸುಗಂಧ.. ಒಟ್ಟಿನಲ್ಲಿ ಆ ಕಾಡಿಗೆ ಒಬ್ಬರೇ ಹೋದರೆ ನೂರಾರು ಯೋಚನೆಗಳು ಆಕ್ರಮಣ ಮಾಡಿ ಮನಸ್ಸನ್ನ ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ಅದಕ್ಕೇ ನನಗೆ ಮತ್ತೆ ಮತ್ತೆ ಅಲ್ಲಿಗೆ ಹೋಗಬೇಕು ಅನಿಸುತ್ತಿತ್ತು.

ಅಲ್ಲಿ ಹೋಗುತ್ತೇವೆ ಅಂತ ಹೇಳಿದರೆ ಮನೆಯಲ್ಲಿ ಒಪ್ಪುತ್ತಿರಲಿಲ್ಲ. ಅದಕ್ಕೇ ನಾವು ಗದ್ದೆಗೆ ಹೋಗ್ತೀವಿ ಅಂತ ಹೇಳಿ ಹೊರಟದ್ದು, ಗಮ್ಯ ಅಶೋಕಾವನ…

ಹೋಗುವಾಗ ತಮಾಷೆ ಮಾಡುತ್ತಾ ದೊಡ್ಡದಾಗಿ ಮಾತಾಡುತ್ತಾ ಕರಡಿಗೆಮನೆ ಕೆರೆಯ ಏರಿ ಹತ್ತುತ್ತಾ ಇರುವಾಗ ನಾನು ಸುಮ್ಮನೇ ತಮಾಷೆಗೆ ಹುಲಿ ಬಂದರೆ ಏನು ಮಾಡ್ತೀರಿ, ದೆವ್ವ ಬಂದರೆ ಏನು ಮಾಡ್ತೀರಿ ಅಂತ ಕೇಳಿದೆ. ಆಗ ರೋಹಿತ್ , ಹುಲಿ ಬಂದರೆ ನಾನು ಕಚ್ಚಿ ಬಿಸಾಡ್ತೀನಿ, ಸಿಂಹಕ್ಕೆ ಒಂದು ಒದ್ದರೆ ಹಾಗಾಗುತ್ತೆ..etc etc ಬಿಲ್ಡಪ್ ಕೊಡ್ತಾ ಇದ್ರೆ ನಾನು ನಿವೇದ್ ನೋಡಿ ಮಜಾ ತೊಗೊಳ್ತಾ ಇದ್ವಿ. ಇಷ್ಟು ಪೂರ್ತಿ ಮುಗ್ಧವಾಗಿ behave ಮಾಡೋ ವಯಸ್ಸು ಮುಗಿದು ಹೋಗಿದ್ದಕ್ಕೆ ನಂಗೆ ಬೇಸರವಾಯ್ತು..

ಅಶೋಕವನ ಹೊಕ್ಕ ತಕ್ಷಣ ವಾತಾವರಣ ಬದಲಾಗಿಬಿಡುತ್ತೆ, ಆ ಅರಣ್ಯನಿಶ್ಶಬ್ಧತೆಗೆ ಮನಸ್ಸು ಹೊಂದಿಕೊಳ್ಳೋದು ಕಷ್ಟ. ಸಂಜೆಯಾದ್ದರಿಂದ ಸೂರ್ಯನ ವಾರೆ ಕೆಂಗಿರಣಗಳು ಅಲ್ಲಿದ್ದ ಎತ್ತರೆತ್ತರ ಮರಗಳ ಬೃಹತ್ ಕಾಂಡಗಳ ಮೇಲೆ ಬಿದ್ದು ಮರಗಳೆಲ್ಲಾ ಅರೆಗೆಂಪು ಅರೆಗಪ್ಪು ಆಗಿ ಕಾಣುತ್ತಿದ್ದವು. ಗೂಡಿಗೆ ಹೊರಟಿದ್ದ ನೂರಾರು ಹಕ್ಕಿಗಳ ಚಿಲಿಪಿಲಿ ಸ್ವಲ್ಪ ಭಯಂಕರವಾಗೇ ಕೇಳ್ತಿತ್ತು.

ಇಬ್ಬರನ್ನೂ ಹೇಗೋ ಹುರಿದುಂಬಿಸಿಕೊಂಡು ನಾನು ಕರೆದುಕೊಂಡು ಹೋಗ್ತಾ ಇದ್ದರೆ ರೋಹಿತ್ ನಿಧಾನಕ್ಕೆ ನಂಗೆ ಭಯವಾಗ್ತಾ ಇದೆ, ವಾಪಸ್ ಹೋಗೋಣ ಅನ್ನಲು ಶುರುಮಾಡಿದ. ನಿವೇದ್ ಒಬ್ಬನೇ ಇದ್ದರೆ ಅವನನ್ನು ಕರೆದುಕೊಂಡು ಹೋಗೋದು ಕಷ್ಟವಾಗ್ತಿರಲಿಲ್ಲ. ಯಾಕೆಂದರೆ ಅವನದ್ದು ಒಂಥರಾ ಸಾಹಸೀ ಪ್ರವೃತ್ತಿ.
ಕೆಲವು ಮರಗಳಲ್ಲಿ ದೆವ್ವ ಭೂತ ಇರುತ್ತವೆ ಅನ್ನೋದು ನಿಜವೋ ಸುಳ್ಳೋ, ಆದರೆ ಅವುಗಳಲ್ಲಿ ಏನೋ ವಿಶೇಷತೆ ಇರುವುದಂತೂ ಹೌದು. ಇಲ್ಲವಾದರೆ ಅಷ್ಟು ನಿಬಿಡವಾದ ಬೆಟ್ಟದಲ್ಲಿ ಅದೊಂದು ಮರವನ್ನ ನೋಡಿದರೆ ಮಾತ್ರ ಅಲ್ಲೇನೋ ಇದೆ ಅಂತ ಅನ್ನಿಸುವುದು ಏಕೆ?! (ನೀವೂ ಬನ್ನಿ, ನಿಮಗೂ ಹಾಗೇ ಅನ್ನಿಸುತ್ತೆ) . ಕೇವಲ ಒಬ್ಬಿಬ್ಬರಲ್ಲ, ನಾನು ಕೇಳಿದ ಎಲ್ಲರೂ ಅದೊಂದುಅಶೋಕ ಮರ ಸಹಜವಾಗಿಲ್ಲ ಅಂತ ಒಪ್ಪಿಕೊಂಡಿದ್ದಾರೆ. ನೋಡಲು ಎಲ್ಲಾ ಮರಗಳಂತೆ ಇದ್ದರೂ ಅದರ ಬಳಿ ಹೋದಾಗ ಏನೋ ಭೀತಿ ಶುರುವಾಗುತ್ತೆ.
ನಾನು ಮಾತಾಡ್ತಾ ಅವರಿಬ್ಬರಿಗೂ ಆ ಮರ ಗಮನಕ್ಕೆ ಬರೋ ಮೊದಲು ಮುಂದೆ ಸಾಗಿಬಿಡೋಣ ಅಂತಿದ್ದೆ, ಆದರೆ ರೋಹಿತ್ ಅಲ್ಲೇ ವಾಪಸ್ಸು ಹೋಗೋಣ ಅಂತ ಹಠ ಹಿಡಿದುಬಿಟ್ಟ. ಆ ಮರ ನೋಡಿದ ಮೇಲೆ ನನಗೂ ಇದ್ದ ಉತ್ಸಾಹ ಸ್ವಲ್ಪ ಕಮ್ಮಿಯಾಗಿತ್ತು. ಜೊತೆಗೆ ರೋಹಿತ್ ನ ಭಯ ಸಾಂಕ್ರಾಮಿಕವಾಗಿ ನಿವೇದನಿಗೂ ನನಗೂ ಹಬ್ಬಿ ವಾಪಸ್ಸು ಹೊರಟೆವು.

ಸುಮ್ಮನೇ ಇಲ್ಲಿವರೆಗೆ ಬಂದು ಚೂರೂ ಮಜಾ ಬರಲಿಲ್ಲ ಅಂತ ನಂಗೆ ಬೇಸರವಾಗಿತ್ತು. ಅದಿಕ್ಕೇ ಏನಾದರೂ ಕೀಟಲೆ ಮಾಡಬೇಕು ಅಂತ ಪ್ಲಾನ್ ಮಾಡಿದೆ. ಡಾಂಬರು ರಸ್ತೆ ಮುಗಿದು ಕೆರೆ ಏರಿಯ ಬೆಟ್ಟಕ್ಕೆ ಬರುತ್ತಿದ್ದಹಾಗೆ ನಿಧಾನಕ್ಕೆ ನಾನು acting ಶುರು ಮಾಡಿದೆ.

ನಾನು ವಿಶ್ವನಾಥ್ ಅಲ್ಲ, ಸಖ್ಯಮೇಧನ ದೆವ್ಯ, ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳೋಕೆ ಈ ದೇಹದಲ್ಲಿ ಸೇರ್ಕೊಂಡಿದೀನಿ, etc etc ಡೈಲಾಗ್ ಬಿಡಲು ಶುರುಮಾಡಿದೆ. ( ಇದನ್ನೋದಿ ನೀವು ಇದೇನು ಹುಚ್ಚು ಅಂತ ನಗ್ತಾ ಇರ್ತೀರಾ, ನಂಗೊತ್ತು, ಆದರೆ ಆಗ ನಂಜೊತೆ ಇದ್ದವರು ಮಕ್ಕಳು + ನಾನೂ ಪೆದ್ದುಪೆದ್ದಾಗಿ ತುಂಬಾ ಕೀಟಲೆ ಮಾಡ್ತಿದ್ದೆ, So it worked. ) ಮೊದಲು ಅವರು ತಮಾಷೆಯಾಗೇ ತೊಗೊಂಡರು. ಯಾಕೆಂದರೆ ನನ್ನ ಸಿನಿಮೀಯ ಅಭಿನಯದಲ್ಲಿ ಹಾಸ್ಯ ಇತ್ತೇ ವಿನಹ ಚೂರೂ ಗಾಂಭೀರ್ಯ ಇರಲಿಲ್ಲ. ಆದರೆ ಸ್ವಲ್ಪ ಜೋಶ್ ನಲ್ಲಿ ನಾನು ಅಲ್ಲೇ ಮುರಿದು ಬಿದ್ದಿದ್ದ ಒಣ ಕೋಲೊಂದನ್ನ ತೆಗೆದುಕೊಂಡು ಕಾಲಿಗೆ ರಪ್ ಅಂತ ಎರಡ್ಮೂರು ಸಲ ಬಾರಿಸಿಕೊಂಡ ಮೇಲೆ ಅವರು ಸ್ವಲ್ಪ ಸೀರಿಯಸ್ ಆದರು. ನಾನು ದೆವ್ವದ ತರಹ ಪೋಸ್ ಕೊಡುತ್ತಲೇ ಇದ್ದೆ. ನಿವೇದ ತಾನು ನೋಡ್ತೀನಿ ಅಂತ ಹೇಳಿ ಅಲ್ಲಿದ್ದ ಇನ್ನೂ ದಪ್ಪನಾದ ಒಂದು ದೊಣ್ಣೆ ತೆಗೆದುಕೊಂಡು ನನ್ನ ಕಾಲಿಗೆ ಒಮ್ಮೆ ಬಾರಿಸಿದ. ನಾನು ಏನೂ ಆಗಲಿಲ್ಲ ಎಂದೆ. ಅವನು ಇದ್ದಷ್ಟೂ ಶಕ್ತಿ ಹಾಕಿ ರಪ್ ಅಂತ ಇನ್ನೊಮ್ಮೆ ಬಾರಿಸಿದ. ಆ ಕೋಲು ಇದ್ದಷ್ಟು ದಪ್ಪಕ್ಕೆ ಚರ್ಮ ಕೆಂಪಾಯ್ತು. ನಿಮಿಷದೊಳಗೆ ಬಾತುಕೊಂಡು ಅಲ್ಲಷ್ಟೇ ಚರ್ಮ ಉಬ್ಬಿತು. ಆದರೆ ಚಿಕ್ಕಂದಿನಲ್ಲಿ ಇಂತ ನೂರಾರು ಹೊಡೆತ ತಿಂದಿದ್ದ ನನಗೆ ನೋವಾದರೂ ಅದನ್ನು ಮುಖದಲ್ಲಿ ತೋರಿಸದೇ ಇರಲು ಸಾಧ್ಯವಾಯ್ತು. ಜೊತೆಗೆ ನನ್ನ ಅಭಿನಯ ಕೆಲಸ ಮಾಡ್ತಾ ಇರೋ ಖುಷಿಯ ಮುಂದೆ ಅದು ಗೌಣವಾಯ್ತು.

ಆದರೆ ಅಷ್ಟು ಗಟ್ಟಿಯಾಗಿ ಹೊಡೆದರೂ ನಾನು ಹಾಗೇ ಇದ್ದದ್ದು ನೋಡಿ ನಿವೇದ್ ಮತ್ತು ರೋಹಿತ್ ಇಬ್ಬರೂ ಫುಲ್ ಸೀರಿಯಸ್ ಆದರು. ನಿಜಕ್ಕೂ ನಾನು ದೆವ್ವನೇ ಇರಬಹುದು ಅಂತ ಅವರಿಗೆ ಅನ್ನಿಸಲು ಶುರುವಾಯ್ತು! ಅವರು ನಿಧಾನಕ್ಕೆ ದೂರ ಹೋಗಲು ಶುರು ಮಾಡಿದರು. ನಾನು ಸದಾ ಮನೆಯಿಂದ ಹೊರಗೆ ಹೋಗುವಾಗ ಕೈಯಲ್ಲೊಂದು ಪುಸ್ತಕ ಹಿಡಿದುಕೊಳ್ತಿದ್ದೆ. ಬಹುತೇಕ ಸಮಯ ಅದು ನನ್ನ ಇಷ್ಟದ ಇಂಗ್ಲೀಷ್ ಪುಸ್ತಕ ಆಗಿರ್ತಿತ್ತು . ಅದು ಆಗ ನಿವೇದನ ಕೈಯಲ್ಲಿತ್ತು. ನಾನು ಮುಖದ ತುಂಬಾ ದೆವ್ವದ ನೋಟ ತುಂಬಿಕೊಳ್ಳಲು ಯತ್ನಿಸುತ್ತಾ ನಿವೇದನ ಕೈಯಿಂದ ಅದನ್ನ ಕಸಿದುಕೊಂಡೆ. ಆ ಮಧ್ಯೆ ಅದರ ಹಿಂದಿನ ಕವರ್ ಪುಟದ ಅರ್ಧ ಭಾಗ ಹರಿದು ಅವನ ಕೈಯಲ್ಲೇ ಉಳಿಯಿತು. ಪುಸ್ತಕ ನನ್ನ ಕೈಯಲ್ಲಿ..

ಪುಸ್ತಕ ಹರಿದಿದ್ದಕ್ಕೆ ಆದ ಬೇಸರ ತೋರಿಸಿಕೊಳ್ಳಬಾರದು ಅಂತ ನಾನು ತುಂಬಾ ಸಿಟ್ಟು ಬಂದವನ ರೀತಿ ಅಲ್ಲೆಲ್ಲಾ ಓಡಾಡಿ ಮರಕ್ಕೆ ಗುದ್ದಿ ಗದ್ದಲ ಎಬ್ಬಿಸಿದೆ. ಅವರಿಬ್ಬರೂ ಈ ದೆವ್ವದ ಸಹವಾಸವೇ ಸಾಕು ಅಂತ ಕೆರೆಯನ್ನು ಸುತ್ತಿ ಬರುವ ದಾರಿ ಬಳಸಿ ಮನೆಯ ಕಡೆ ಓಡಿದರು. ನಾನು ಅಲ್ಲೇ ಏರಿ ಇಳಿದು ಇನ್ನೊಂದು ಮಗ್ಗುಲಿನಿಂದ ಮನೆಯ ಕಡೆ ಓಡಿದೆ.

ಮನೆಯ ಅಂಗಳದಿಂದ ಸ್ವಲ್ಪ ಈಚೆ ಕೆರೆಗೆ ಹೋಗುವ ದಾರಿಯಲ್ಲಿ ಮಾವ ಇಬ್ಬರು ಆಳುಗಳ ಬಳಿ ಕೆಲಸ ಮಾಡಿಸುತ್ತಿದ್ದರು. ನಾನೂ ಅಲ್ಲೇ ಮಾತನಾಡುತ್ತಾ, ನಿವೇದ್ ಮತ್ತು ರೋಹಿತ್ ಬರುವುದನ್ನೇ ಕಾಯುತ್ತಾ ಕುಳಿತೆ.ಅವರು ಬರುತ್ತಿದ್ದಂತೆ ಪೂರಾ ಅಮಾಯಕನ ಹಾಗೆ “ನಿವೇದ್, ರೋಹಿತ್ , ಎಲ್ಲಿಗೆ ಹೋಗಿದ್ರಿ? ” ಅಂತ ಕೇಳಿದೆ! ಅವರಿಬ್ಬರಿಗೂ ಶಾಕ್! ಅವರು ಎಷ್ಟೇ ವಾದ ಮಾಡಿದರೂ, ನಾನು ಆಗಿಂದ ಇಲ್ಲೇ ಇದ್ದೇನೆ, ಎಲ್ಲೂ ಹೋಗಿಲ್ಲ ಅಂತ ಹೇಳಿದೆ. ಜೊತೆಗೆ ನನ್ನ ಕೀಟಲೆಯ ಪರಿಚಯ ಇದ್ದ ಮಧುಮಾವ ಕೂಡಾ ತಮಾಷೆಗೆ ನನಗೇ ಸಪೋರ್ಟ್ ಮಾಡಿದರು. ಇದು ಅವರಿಬ್ಬರನ್ನೂ ಇನ್ನೂ ಗೊಂದಲಕ್ಕೆ ಈಡು ಮಾಡಿತು.

ನಂತರ ಮನೆಗೆ ಬಂದ ಮೇಲೆ ಗ್ಯಾಲರಿಗೆ ಹೋಗಿ ಕುಳಿತು ನಾನು ಕಾಲಿಗೆ ಪೆಟ್ಟು ಬಿದ್ದಲ್ಲಿ ತಿಕ್ಕಿ ತಿಕ್ಕಿ ನೋವಾದರೂ ಕೂಡಾ ಉಬ್ಬಿದ್ದು ತಿಳಿಯದಂತೆ ಮಾಡಿದೆ. ಕೆಂಪು ಬಣ್ಣವೂ ಈಗ ಹೋಗಿತ್ತು. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಪೆಟ್ಟಾಗಿದ್ದು ತಿಳಿಯುತ್ತಿತ್ತು..

ಅಲ್ಲಿಗೆ ಬಂದ ನಿವೇದ “ಅಣ್ಣಾ, ನೋವಾಯ್ತಾ?” ಅಂತ ಕೇಳಿದ. ಬಹುಶಃ ಆಗ ಅಷ್ಟು ಜೋರಾಗಿ ಹೊಡೆದದ್ದು ಅವನಿಗೆ ಬೇಸರವಾಗಿರಬೇಕು. ಆದರೆ ನಾನು ಏನೂ ಗೊತ್ತಿಲ್ಲದವನಂತೆ “ಯಾಕೆ ನೋವಾಗಬೇಕು?” ಅಂತ ಕೇಳಿದೆ. ಅದಕ್ಕೆ ಅವನು ಅಷ್ಟು ಜೋರಾಗಿ ಹೊಡೆತ ತಿಂದರೂ ನಟಕ ಮಾಡ್ತೀಯಾ ಅಂತ ಕೇಳಿದ. ನಾನು ಯಾರು ಹೊಡೆತ ತಿಂದರು ಅಂತ ಕೇಳಿದೆ. ಮಾತು ಹೀಗೇ ಮುಂದುವರೆದು ಅವನು ನನ್ನ ಕಾಲನ್ನು ನೋಡಿದರೆ ಗಾಯವೇ ಇಲ್ಲ! ನಾನು ಅವನ ಬಳಿ ಏನೇನು ನಡೆಯಿತು ಎಲ್ಲಾ ಹೇಳು ಅಂದೆ. ಅವನು ಗದ್ದೆಗೆ ಹೋಗುವಾಗಿಂದ ಬರುವವರೆಗೆ ನಡೆದ ಎಲ್ಲವನ್ನೂ ಹೇಳಿದ. ಮಧ್ಯೆ ಇಂಗ್ಲೀಷ್ ಪುಸ್ತಕ ಹರಿದದ್ದನ್ನೂ ಹೇಳಿದ. ನಾನು ಎಲ್ಲಾ ಕೇಳಿಸಿಕೊಂಡು ಕಷ್ಟಪಟ್ಟು ಅಮಾಯಕತೆ ನಟಿಸಿ ಹೇಳಿದೆ:” ನಿವೇದ, ಅಲ್ಲಿ ಬಂದಿದ್ದು ದೆವ್ವವೇ ಇರಬೇಕು. ಯಾಕೆಂದರೆ ನಾನು ಅಲ್ಲಿ ಬರಲೇ ಇಲ್ಲ. ಜೊತೆಗೆ ನೀನು ನನ್ನ ಇಂಗ್ಲಿಷ್ ಪುಸ್ತಕ ಹರಿದಿದೆ ಅನ್ತೀಯ. ಆದರೆ ಅದು ಸರಿಯಾಗೇ ಇದೆ ನೋಡು!” ಅಂತ ಹೇಳಿ ನನ್ನ ಪುಸ್ತಕ ತೋರಿಸಿದೆ. ಅದಕ್ಕೆ ಏನೂ ಆಗಿರಲಿಲ್ಲ. ಆಗ ಅವನ ಮನಸ್ಸಿನಲ್ಲಿ ತಮ್ಮ ಜೊತೆ ಬಂದದ್ದು ದೆವ್ವವೇ ಎಂಬುದಕ್ಕೆ ಯಾವ ಅನುಮಾನವೂ ಇರಲಿಲ್ಲ.

ನಂತರ ಅವನು ಅಟ್ಟಕ್ಕೆ ಹೋಗಿ ಅಳುತ್ತಾ ಕೂತಾಗ ಸಮಾಧಾನ ಮಾಡಲು ಬಹಳ ಸಮಯ ಬೇಕಾಯಿತು. ನಾನು ಮಾಡಿದ ನಾಟಕ ಎಲ್ಲಾ ಒಪ್ಪಿಕೊಂಡೆ. ಹರಿದ ಇಂಗ್ಲೀಷ್ ಪುಸ್ತಕದ ಜೊತೆ ನನ್ನ ಬಳಿ ಇದ್ದ ಇನ್ನೊಂದು ಇಂಗ್ಲೀಷ್ ಪುಸ್ತಕ (????????) ಕೂಡಾ ತೋರಿಸಿದೆ. ಆಮೇಲೆ ಅವನಿಗೂ ನಿರಾಳವಾಯ್ತು.

ಈಗ ಇದನ್ನೆಲ್ಲ ನೆನೆಸಿಕೊಂಡರೆ ಆಗ ಅಷ್ಟೊಂದು ಕೀಟಲೆ ಮಾಡಬಾರದಿತ್ತು ಅನಿಸುತ್ತೆ. ಜೊತೆಗೆ ಇಂಥವೆಲ್ಲ ಈಗ ನೆನಪು ಮಾತ್ರ ಅಂತ ಬೇಸರವಾಗುತ್ತೆ.

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *