ಕೃಷ್ಣಾ……

ಹರಿ ನಿನ್ನ ಕರುಣೆಯಲಿ ಬರಿಬಾಳು ಅರಳೀತು
ಸುರಿದೀತು ಸಿರಿಯ ಸುಧೆಯು
ಬಿರಿದ ಒಡಕಿನ ಬಿದಿರಲೊಸರೀತು ಹೊಸ ರಾಗ
ಮುರಳಿಲೋಲನೆ! ಮರಳಿ ಪೊರೆಯುವಾಗ

ಮೂಡೀತು ಮೈಮೇಲೆ ನೂರು ಮುಳ್ಳಿನ ಕಂತೆ
ಕ್ಷಮಿಸು ದೇವನೆ ಬಿದಿರಿನಪರಾಧವ
ಭವರೋಗವಿದು ತಾನೆ, ಬಾಳು ತಪ್ಪಿನ ಸಂತೆ
ಅವಗಾಣನೆಯು ಯಾಕೊ, ಓ ಮಾಧವ

ಸಿರಿ, ಸೊಗಸು, ಸೌಕರ್ಯ ಬಾಳಲೆಲ್ಲವು ಬಂತು
ಮರಳಿ ಬಂದಿಹ ದಾರಿಯಲ್ಲೆ ಹೋಯ್ತು
ಗಿರಿಧರನೆ, ನೂರುಂಟು ದೊರಕಿದ್ದು ಕಳೆದಿದ್ದು
ಮರಳಿ ಮನ ನಿನ್ನಲ್ಲಿ ದೀನವಾಯ್ತು

ಹೊಸೆದೆ ದಿನವನು, ಬೆಸೆದೆ ಬಂಧವನು ಮಾಧವನೆ
ಕಸಿದೆ ಪ್ರೀತಿಯ, ಎಸೆದೆ ಒಲವ ರನ್ನ
ಹಸಿಗೂಸು ಎದೆಗೊದೆಯೆ ಮನ್ನಿಸುವ ತಾಯಂತೆ
ಹೊಸಕನಸಿಗುಸಿರಿತ್ತು ಸಲಹು ನನ್ನ

 

ಕವನತನಯ

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *